ಹಸಿವು
ಜೋತು ಬಿದ್ದ ಗುಡಿಸಲಿನಲ್ಲಿ
ನಿತ್ಯ ಖಾಲಿ ಹೊಟ್ಟೆಯ ಕೂಗು
ಅನ್ನ ಹಾಕುವ ಧಣಿಗೆ ಈಗ
ಎಸಿ ರೂಮಿನಲ್ಲಿ ಜೊಂಪು
ಮಳೆ ಇಲ್ಲದೆ ಬರಡಾದ ಹೊಲದಲ್ಲಿ
ಅಪ್ಪನ ಬದುಕು ಹರಿದ ಕೌದಿ
ಮಾರುಕಟ್ಟೆಯಲ್ಲಿ ಬರೀ ಲಾಭದ ಚಿಂತೆ
ಅನ್ನ ತರಲು ಹೋದ ಅಣ್ಣ
ದಾರಿ ಕಾಯುತ್ತಿರುವ ಮಕ್ಕಳು
ಪಟಾಕಿ ಅಂಗಡಿ ಭಸ್ಮ
ಯಾರದೊ ಖುಷಿಗೆ ಬದುಕು ಬೀದಿಪಾಲು
ನಿಲ್ಲದ ಕಣ್ಣೀರು.
ಗುಳೆ ಹೊರಟ ಜನರ ದಂಡು
ಕಸದ ಡಬ್ಬಿಯಾದ ರೈಲು ಬೋಗಿ
ಅತ್ತು ಕೆಂಡವಾದ ಕಣ್ಣು
ದೂರುವುದು ಇಲ್ಲಿ ಯಾರನ್ನು
ಹಸಿವು ಅನ್ನುವುದು ಇಲ್ಲಿ
ಮದ್ದು ಸಿಗದ ಖಾಯಿಲೆ
ಯುದ್ಧದ ಹೆಸರಲ್ಲಿ ಇಲ್ಲಿ
ಶವಗಳ ಮೆರವಣಿಗೆ
ಧೂಳು ಮತ್ತು ಹೊಗೆಯಲ್ಲಿ
ಅನಾಥ ಮಕ್ಕಳ ಆಕ್ರಂದನ
ಬದುಕು ಈಗ ಬಿಕರಿಗಿಟ್ಟ ಮಾಲು
- ಸುರೇಶ ಕಂಬಳಿ ಗಬ್ಬೂರು ಕೊಪ್ಪಳ