ಕವಿತೆಯೆಂದರೆ......
ಕವಿತೆ ಬರೆಯುವುದೆಂದರೆ
ಕನವರಿಸುವುದಲ್ಲ
ಮನದಲಿ ಮಥಿಸಬೇಕು
ಕವಿತೆ ಬರೆಯುವುದೆಂದರೆ
ವನ ವನ ಸುತ್ತುವುದಲ್ಲ
ಚಿತ್ತ ಬಿತ್ತಿಯೊಳು ಚಿಗುರಬೇಕು
ಕವಿತೆ ಬರೆಯುವುದೆಂದರೆ
ಸಾಲುಸಾಲಲಿ ಅಕ್ಷರ ಕೂಡಿಸುವುದಲ್ಲ
ಅಕ್ಕರೆಯ ಸಕ್ಕರೆ ಪಾಕವಾಗಬೇಕು
ಕವಿತೆ ಬರೆಯುವುದೆಂದರೆ
ಪ್ರಯಾಸದಿ ಪ್ರಾಸ ಜೋಡಿಸುವುದಲ್ಲ
ಪುಟಿಪುಟಿಯುವ ಜೀವ ಸೆಲೆಯಿರಬೇಕು
ಕವಿತೆ ಬರೆಯುವುದೆಂದರೆ
ವಿಷಯಕಾಗಿ ತಿಣುಕಾಡುವುದಲ್ಲ
ಹದವಾಗಿ ಕಾದ ಹಾಲ್ಗೆನೆಯಾಗಬೇಕು
ಕವಿತೆ ಬರೆಯುವುದೆಂದರೆ
ಮಿಡಿಗಾಯಿ ಕಸುಗಾಯಿಯಂತಲ್ಲ
ಮಾಗಿ ಕಳೆತ ಹಣ್ಣಾಗಬೇಕು
ಕವಿತೆ ಬರೆದದ್ದು ಕವಿತೆಯಂತಿರಬೇಕು
ಸವಿ ರಸಕಾವ್ಯದಂದದಿ ರುಚಿಸಬೇಕು
ರಮ್ಯತೆಯ ಭಾವ ಮೈತೆಳೆಯಬೇಕು.
- ಶ್ರೀಮತಿ ಕಲಾವತಿ ಕುಲಕರ್ಣಿ.
ಕೊಪ್ಪಳ.