ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಫಾರ್ ಇಂಡಿಯಾ ( SUCI ) ಕಮ್ಯುನಿಸ್ಟ್ ಪಕ್ಷ ಶರಣು ಗಡ್ಡಿಯವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ರಾಜ್ಯದ 19 ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಸೆಕ್ರೆಟರಿಯಟ್ ಸದಸ್ಯ ರಾಮಾಂಜನಪ್ಪ ಅಲ್ದಳ್ಳಿ ಹೇಳಿದರು.
ಸೋಮವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಬಿಜೆಪಿ ಕಾಂಗ್ರೆಸ್ ಎರಡೂ ಮೈತ್ರಿಕೂಟದ ವಿರುದ್ದ ಟೀಕಿಸಿದರು.
2014 ರಲ್ಲಿ ಬಿಜೆಪಿ ಹೇಳುತ್ತಿದ್ದ ಭ್ರಷ್ಟಾಚಾರ , ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗ್ಗೆ ಈಗ ಬಿಜೆಪಿ ಮೌನವಾಗಿದೆ. ದೇಶದ ಯುವಕರು ನಿರುದ್ಯೋಗದ ಕಷ್ಟದಲ್ಲಿದ್ದಾರೆ. ಇಷ್ಡು ವರ್ಷ ಆಳಿದ ಕಾಂಗ್ರೆಸ್ ಕೂಡ ದೇಶ ಹಾಳುಗೆಡವಿದೆ. NDA ಮತ್ತು ಇಂಡಿಯಾ ಎರಡೂ ಮೈತ್ರಿಕೂಟಗಳು ಬಂಡವಾಳಶಾಹಿ ವರ್ಗದ ಪರ್ಯಾಯಗಳು ಎಂದರು.
SUCI ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಮೂಲತಃ ಗಂಗಾವತಿ ತಾಲೂಕಿನ ಗಡ್ಡಿಯವರು. 2013 ರಿಂದ ಕಮ್ಯುನಿಸ್ಟ್ ಚಳುವಳಿಯಲ್ಲಿ ತೊಡಗಿಸಿಕೊಂಡು ಜಿಲ್ಲೆಯ ವಿದ್ಯಾರ್ಥಿ , ಯುವಕರ, ರೈತರ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರ ಪರ ಹೋರಾಟದ ನಾಯಕತ್ವ ವಹಿಸಿದ್ದಾರೆ. ಜನರ ಧ್ವನಿಯಾಗಲು ಲೋಕಸಭೆಗೆ ಶರಣು ಗಡ್ಡಿ ಸೂಕ್ತರು ಎಂದು ರಾಮಾಂಜನಪ್ಪ ಅಲ್ದಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಉದ್ಬಾಳ , ಗಂಗರಾಜು ಅಳ್ಳಳ್ಳಿ , ಶರಣು ಪಾಟೀಲ್ ಉಪಸ್ಥಿತರಿದ್ದರು.