ಕೊಪ್ಪಳ : ವಿಧಾನಸಭೆ ಲೋಕಸಭೆ ಯಾವುದೇ ಚುನಾವಣೆ ಇರಲಿ ಆ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪಕ್ಷಾಂತರ ಇರುತ್ತೆ. ಅದು ಸಾಮಾನ್ಯ ಪ್ರಕ್ರಿಯೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಶುಕ್ರವಾರ ಕೊಪ್ಪಳದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಟಿಕೆಟ್ ವಂಚಿತ ಸಂಗಣ್ಣ ಕರಡಿ ಬೆಂಬಲಿಗರ ಪಕ್ಷಾಂತರ ಕುರಿತ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಸಂಗಣ್ಣ ಕರಡಿಯವರ ಬೆಂಬಲಿಗರು ಸಾರಾಸಗಟಾಗಿ ಬೇರೆ ಪಕ್ಷಕ್ಕೆ ಹೋಗಿಲ್ಲ. ಈ ಬಗ್ಗೆ ಸಂಗಣ್ಣನವರ ಜೊತೆ ಮಾತನಾಡಿದ್ದೇವೆ ಎಂದರು.
-------------
ಪುತ್ರನಿಗೆ ಟಿಕೆಟ್ ಸಿಗದ್ದಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಬಗ್ಗೆ , ಕುಟುಂಬ ರಾಜಕಾರಣದ ಬಗ್ಗೆ ಸತತ ಟೀಕೆ ಮಾಡುತ್ತಿರುವ ಕೆ.ಎಸ್.ಈಶ್ವರಪ್ಪ ಟೀಕೆ ನಿಲ್ಲಿಸಬೇಕು ಮತ್ತು ಶಿವಮೊಗ್ಗ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ದೊಡ್ಡನಗೌಡ ಪಾಟೀಲ್ ಆಗ್ರಹಿಸಿದರು.
ಹಿಂದೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ ಈಶ್ವರಪ್ಪನವರು ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿದ್ದರು. ರಾಯಣ್ಣ ಬ್ರಿಗೇಡ್ ಮಾಡಿ ಯಡಿಯೂರಪ್ಪ ವಿರುದ್ದ ಟೀಕಿಸುತ್ತಿದ್ದರು. ಈಗ ತಮ್ಮ ಪುತ್ರಗೆ ಟಿಕೆಟ್ ಸಿಕ್ಕಿಲ್ಲವೆಂದು ಆರೋಪ ಮಾಡುತ್ತಿದ್ದಾರೆ. ಕಳೆದ ಬಾರಿ ಸಮಾಜದವರಿಗೆ ಟಿಕೆಟ್ ಕೊಟ್ಟಿರಲಿಲ್ಲ ಆಗ ಸುಮ್ಮನಿದ್ದರು.
ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ ಅಂತ ಮುಂಚೆಯೇ ಹೇಳಿದ್ದಕ್ಕೆ ದೆಹಲಿಯಲ್ಲಿ ಅಮಿತ್ ಶಾ ಈಶ್ವರಪ್ಪನವರನ್ನು ಭೇಟಿಯಾಗಿಲ್ಲ . ಈಶ್ವರಪ್ಪ ಬಂಡಾಯ ಯಾವುದೇ ಪರಿಣಾಮ ಬೀರಲ್ಲ ಎಂದು ದೊಡ್ಡನಗೌಡ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ MLC ಹೇಮಲತಾ ನಾಯಕ, ಅಮಿತ್ ಕಂಪ್ಲಿಕರ್, ಮಹೇಶ ಹಾದಿಮನಿ, ಮಲ್ಲಣ್ಣ ದಾನಕೈ ಉಪಸ್ಥಿತರಿದ್ದರು.