ಕೊಪ್ಪಳ : ರಾಜ್ಯ ಕಾಂಗ್ರೆಸ್ ಸರಕಾರ ದಲಿತರನ್ನು ಮತ ಪಡೆಯಲು ಸೀಮಿತಗೊಳಿಸಿ ಅನ್ಯಾಯ ಮಾಡಿದ್ದಲ್ಲದೆ ಪ.ಜಾ - ಪ.ಪಂ ಸಮುದಾಯದ ಅಭಿವೃದ್ಧಿಯ 11 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ಬಳಸಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾದ ಪ್ರಭಾರಿ ಅಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿದರು.
ಸೋಮವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸ್ತಾರೆ ಎಂದು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕಾಂಗ್ರೆಸ್ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೇವಲ 45 ಸೆಕೆಂಡ್ ನಲ್ಲಿ ಸಂವಿಧಾನದ ಮೂಲ ಆಶಯಗಳನ್ನೇ ಬದಲಾಯಿಸಿದ್ದು ಇಂದಿರಾಗಾಂಧಿ ಎಂಬುದನ್ನು ಮರೆತಿದ್ದಾರೆ.
ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಸರಕಾರಗಳು ಪ.ಜಾ., ಪ.ಪಂ ಸಮುದಾಯಗಳಿಗೆ ಬಜೆಟ್ ನಲ್ಲಿ 30 ಸಾವಿರ ಕೋಟಿ ಹಣ ನೀಡಿದ್ದರು. ಆಶ್ರಯ ಮನೆ ವೆಚ್ಚ 1.20 ಲಕ್ಷದಿಂದ 2 ಲಕ್ಷಕ್ಕೆ ಏರಿಸಿದರು. 100 ಹೊಸ ಹಾಸ್ಟೆಲ್ ನಿರ್ಮಿಸಿದರು. ಆದರೆ ಈ ಸರಕಾರ ಗ್ಯಾರಂಟಿಗಳ ಅಮಲಿನಲ್ಲಿ ಪ.ಜಾ. ಪ.ಪಂ ಸಮುದಾಯಕ್ಕೆ ಯಾವುದೇ ಹೊಸ ಯೋಜನೆ ರೂಪಿಸಿಲ್ಲ ಎಂದು ಗಣೇಶ ಹೊರತಟ್ನಾಳ ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಸಹ ಪ್ರಮುಖ ಪ್ರಸಾದ್ ಗಾಳಿ, ವಿರುಪಾಕ್ಷಪ್ಪ, ಸೋಮಶೇಖರಗೌಡ, ಮಂಜುನಾಥ ಮುಸಲಾಪುರ, ಅಮಿತ್ ಕಂಪ್ಲಿಕರ್ ಉಪಸ್ಥಿತರಿದ್ದರು.