ಕೊಪ್ಪಳ : ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಆರ್ಥಿಕ ಅಪರಾಧದಲ್ಲಿ 9 ನೇ ಸ್ಥಾನ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 3 ನೇ ಸ್ಥಾನ ಪಡೆದಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ಶುಕ್ರವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ. ಜನರಿಗೆ ಭದ್ರತೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವೈಫಲ್ಯ ಪ್ರಶ್ನಿಸಿದ 20 ಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣ ದಾಖಲಿಸಿ ರಾಜ್ಯ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿದೆ.
ಪ್ರಧಾನಿ ಮೋದಿ ನಾರಿಶಕ್ತಿ ಸಮ್ಮಾನ್ ಯೋಜನೆ ರೂಪಿಸುತ್ತಿದ್ದರೆ ರಾಜ್ಯದ ಹಿರಿಯ ಕಾಂಗ್ರೆಸ್ಸಿಗ ಶ್ಯಾಮನೂರು ಶಿವಶಂಕರಪ್ಪ ಮಹಿಳೆಯರು ಅಡುಗೆ ಮನೆಗೆ ಸೀಮಿತವಾರಬೇಕು ಎಂದು ಮಹಿಳಾ ವಿರೋಧಿ ಹೇಳಿಕೆ ಕೊಡುತ್ತಾರೆ.
ಗುರುವಾರ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯನ್ನು ಇರಿದು ಕೊಂದ ಪ್ರಕರಣ ಜರುಗಿದ್ದು ರಾಜ್ಯದಲ್ಲಿ ಯಾರಿಗೂ ಭದ್ರತೆಯೆ ಇಲ್ಲ ಎಂದರು.
ಸಂಗಣ್ಣ ಕರಡಿಯವರಿಗೆ ಟಿಕೆಟ್ ತಪ್ಪಿದಾಗ ಪಕ್ಷದ ಎಲ್ಲರೂ ಸಮಾಧಾನ ಹೇಳಿದ್ದಾರೆ. ಆದರೆ ಅವರು ಕಾಂಗ್ರೆಸ್ ಸೇರಬಾರದಿತ್ತು. ಈಗ ಪ್ರತಿ ಕ್ಷೇತ್ರದಲ್ಲಿ ಜನ ಬಿಜೆಪಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಟೀಕಿಸುವಾಗ ಮಹಿಳೆಯರು ಹಾದಿ ತಪ್ಪಿದ್ದಾರೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಒಪ್ಪಲ್ಲ. ಅವರು ಬಾಯಿ ತಪ್ಪಿ ಅಂದಿರಬಹುದು. ಆದರೆ ಗ್ಯಾರಂಟಿ ಯೋಜನೆಯಿಂದ ಎಷ್ಟೋ ಕುಟುಂಬಗಳಲ್ಲಿ ಒಡಕು ಬಂದಿದೆ. ನನ್ನನ್ಮು ರಾಜಕೀಯಕ್ಕೆ ಕರೆತಂದದ್ದು ಸಂಗಣ್ಣ ಕರಡಿಯವರು. ನನ್ನ MLC ಮಾಡಿದ್ದು ಬಿಜೆಪಿ ನಾನು ಪಕ್ಷ ನಿಷ್ಠಳು ಎಂದು ಹೇಮಲತಾ ನಾಯಕ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾ ಮುತ್ತಾಳ, ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಪಾಟೀಲ್, ಮಾಧ್ಯಮ ಸಹಪ್ರಮುಖ ಪ್ರಸಾದ್ ಗಾಳಿ ಉಪಸ್ಥಿತರಿದ್ದರು.