ಅದೇನೋ ಅವ್ಯಕ್ತ ಆತಂಕ ಭಾವನೆಗಳು
ಕಣ್ಣರಿಯದಿದ್ದರೂ ಚುರುಗುಟ್ಟಿತು ಕರುಳು
ಮುಂಬರುವ ಸಂಕಟದ ಮುನ್ಸೂಚನೆಗಳು
ತಾಯಿಮಗಳ ಕರುಳಬಳ್ಳಿ ಕತ್ತರಿಸಬಹುದೆ ?
ಹೆತ್ತು ಹಾಲುಣಿಸದಿದ್ದರೂ ತುತ್ತಿಟ್ಟವಳು
ಹೊತ್ತು ಲಾಲಿಸದಿದ್ದರೂ ಹೊತ್ತಿಗಾದವಳು
ಮಧುರ ನೆನಪುಗಳ ಉಡಿ ತುಂಬಿದವಳು
ತಾಯಿಮಗಳ ಬಾಂಧವ್ಯಬಳ್ಳಿ ಬಾಡಬಹುದೆ ?
ಪುಟ್ಟ ಹೃದಯವನು ಜೇನಲದ್ದಿದವಳು
ದಿಟ್ಟತನದಿ ಬದುಕಿ ದಿಕ್ಕು ತೋರಿದವಳು
ಅವರಿವರೆನ್ನದೆ ಒಪ್ಪಿಅಪ್ಪಿದ ಗುಣದವಳು
ತಾಯಿಮಗಳ ಸ್ನೇಹದಬಳ್ಳಿ ಒಣಗಬಹುದೆ ?
ಕಾಲನಕರೆಯ ಮುನ್ನವೇ ಸ್ವಾಗತಿಸಿದವಳು
ದೇಹದಾನವ ಮಾಡಿ ಮಾದರಿಯಾದವಳು
ಅಕ್ಕರದಿ ಅಕ್ಷರಗಳನು ಉಸಿರಾಡಿದವಳು
ತಾಯಿಮಗಳ ಅರಿವಿನಬಳ್ಳಿ ಮುರಟಬಹುದೆ ?
ಸುಟ್ಟ ಬತ್ತಿಯನೇ ಮತ್ತೆಮತ್ತೆ ಹೊಸೆದವಳು
ತಾನುರಿದು ನಂದಾದೀಪವಾಗಿ ಬೆಳಗಿದವಳು
ಬಾಳಸಂಜೆಯ ಪಯಣದಿ ಶಾಂತವಾದವಳು
ತಾಯಿಮಗಳ ಪ್ರೀತಿಬಳ್ಳಿ ಮತ್ತೆ ಚಿಗುರದಿರಬಹುದೆ !
- ಶ್ರೀಮತಿ ವಿಜಯಲಕ್ಷ್ಮಿ ಕೊಟಗಿ
ಮೊ : 9632240787.
( ದಿ. ಶಾಂತಾದೇವಿ ಹಿರೇಮಠರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ನುಡಿನಮನ)